ರಾಯಚೂರು: ಕಾಡು ಪ್ರಾಣಿಗಳನ್ನು ಕೊಂದು ಸಾಗಿಸುತ್ತಿದ್ದ 14 ಜನ ಬೇಟೆಗಾರರನ್ನ ರಾಯಚೂರಿನ ದೇವದುರ್ಗ ಪೊಲೀಸರು ಬಂಧಿಸಿದ್ದಾರೆ.
ದೇವದುರ್ಗ ಪಟ್ಟಣದ ಜಹೀರುದ್ದೀನ್ ಪಾಷಾ ದರ್ಗಾ ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 9 ಮುಳ್ಳು ಹಂದಿಗಳನ್ನು ಕೊಂದು ಕ್ರೂಷರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ.
ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ಮಾನಸಪ್ಪ, ಸಿದ್ದಪ್ಪ, ವೆಂಕಟೇಶ ಸೇರಿ 14 ಜನರನ್ನ ಬಂಧಿಸಲಾಗಿದೆ. ದೇವದುರ್ಗದ ಕಾಡು ಪ್ರದೇಶದಲ್ಲಿ ಬೇಟೆಯಾಡಿ ಮುಳ್ಳು ಹಂದಿಗಳನ್ನು ಸಮುದ್ರ ಗ್ರಾಮಕ್ಕೆ ಹೊತ್ಯೊಯ್ಯುತ್ತಿದ್ದರು. ಘಟನೆ ಹಿನ್ನೆಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ 14 ಜನ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.