ವಿಜಯಪುರ: ಪಲ್ಸರ್ ಬೈಕ್ ಡಿಕ್ಕಿಯಾದ ಪರಿಣಾಮ 7 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ರಾಮಪ್ಪ ಪಟ್ಟಣದ ಬಳಿ ನಡೆದಿದೆ.
ಸುದೀಪ್ ಪಟ್ಟಣ್(7) ಮೃತ ಬಾಲಕ. ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದ ರಾಮಪ್ಪ ಪಟ್ಟಣ್ ಅವರ ಮಗನಾಗಿದ್ದು, ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಅಪಘಾತ ಸಂಭವಿಸಿದೆ.
ಕನ್ನೋಳ್ಳಿ ಜಿಲ್ಲಾ ಪಂಚಾಯತ್ ಸದಸ್ಯೆಯ ಸಂಬಂಧಿಕರ ಬೈಕ್ನಿಂದ ಈ ಅಪಘಾತ ಸಂಭವಿಸಿದೆ. ಬಾಲಕ ಸುದೀಪ್ ತಂದೆ ಜೊತೆ ಹೊರ ಹೋಗಿ ಮನೆಗೆ ಹಿಂದಿರುಗಿದ್ದನು. ಬಳಿಕ ಬೈಕ್ ಇಳಿದು ಮನೆಕಡೆ ಹೋಗುವಾಗ ವೇಗವಾಗಿ ಬಂದ ಪಲ್ಸರ್ ಬೈಕ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಅಪಘಾತವಾದ ಬೈಕ್ ಬದಲಿಸಲು ಸದಸ್ಯೆಯ ಪತಿ ಪ್ರಯತ್ನಿಸಿದ್ದು, ಸದಸ್ಯೆ ಪತಿಯ ದುರ್ನಡತೆಯನ್ನು ಖಂಡಸಿ ಮಗುವಿನ ಶವನಿಟ್ಟು ಗ್ರಾಮಸ್ಥರು ಪ್ರತಭಟನೆ ಮಾಡುತ್ತಿದ್ದಾರೆ. ರಾಜಕೀಯ ಪ್ರಾಬಲ್ಯದಿಂದ ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡದೆ ಅಂತ್ಯಸಂಸ್ಕಾರಕ್ಕೆ ಸದಸ್ಯೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಗ್ರಾಮಸ್ಥರು ಮಗುವಿನ ಶವವನ್ನು ರಸ್ತೆಯಲ್ಲಿ ಇಟ್ಟು ನ್ಯಾಯ ಸಿಗುವರೆಗೂ ಅಂತ್ಯಸಂಸ್ಕಾರಕ್ಕೆ ಅವಕಾಶ ನಿಡುವುದಿಲ್ಲವೆಂದು ಪಟ್ಟು ಹಿಡಿದ್ದಾರೆ.
ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಧ್ಯ ರಾತ್ರಿ ಕಳೆದರೂ ಗ್ರಾಮಸ್ಥರು ಪಟ್ಟು ಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಗು ಕಳೆದುಕೊಂಡ ತಂದೆ- ತಾಯಿ ಮತ್ತು ಸಂಬಂಧಿಗಳ ರೋಧನೆ ಮುಗಿಲು ಮುಟ್ಟಿದೆ.