ಬಾಗಲಕೋಟೆ: ಅಪಹರಣಕಾರರ ಕೈಯನ್ನು ಕಚ್ಚಿ ಬಾಲಕನೋರ್ವ ಗ್ರೇಟ್ ಎಸ್ಕೇಪ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.
ಅಪಹರಣದ ನಡೆದ ಬಗ್ಗೆ ಈಗ ಬಾಲಕನ ಪೋಷಕರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ನಮ್ಮ ಮಗ ಪ್ರಥಮ್ ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದ್ದಾನೆ. ಪ್ರಥಮ್ ಎಂದಿನಂತೆ ಬೆಳಗ್ಗೆ ಬೇಗ ಶಾಲೆಗೆ ಹೋಗಿ ಮೈದಾನದಲ್ಲಿ ಆಟ ಆಡಿ ಗಿಡದ ಕೆಳಗೆ ಕುಳಿತಿದ್ದ. ಆ ವೇಳೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಕ್ರಿಕೆಟ್ ಆಡಲು ಮೈದಾನಕ್ಕೆ ಇಬ್ಬರು ದುಷ್ಕರ್ಮಿಗಳು ಆಗಮಿಸಿದ್ದಾರೆ. ಬಾಲ್ ಕಾಂಪೌಂಡ್ ಹೊರಗೆ ಹೊಡೆದ ಬಳಿಕ ಅದನ್ನು ತರಲು ಪ್ರಥಮ್ ಗೆ ಇವರು ಬೆದರಿಕೆ ಹಾಕಿದ್ದಾರೆ. ಆಗ ಪ್ರಥಮ್ ಬಾಲ್ ತರಲು ಕಾಂಪೌಂಡ್ ಬಳಿಗೆ ತೆರಳಿದ್ದಾನೆ. ಈ ವೇಳೆ ಅಲ್ಲಿದ್ದ ಇನ್ನಿಬ್ಬರು ಮುಸುಕುಧಾರಿಗಳು ಮಗನನ್ನು ಬಾಯಲ್ಲಿ ಬಟ್ಟೆ ಇಟ್ಟು ಬೈಕ್ ನಲ್ಲಿ ಎತ್ತಿಕೊಂಡು ಪರಾರಿಯಾಗಿದ್ದಾರೆ.
ಶಿಕ್ಕೇರಿ ಕ್ರಾಸ್ ಬಳಿಯ ರೈಲು ಹಳಿಯ ಹತ್ತಿರ ಮುಳ್ಳು ಗಂಟಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸವಾರ ದೂರಕ್ಕೆ ತೆರಳಿದ್ದಾನೆ. ಈ ವೇಳೆ ಪ್ರಥಮ್ ಬಾಯಲ್ಲಿದ್ದ ಕರವಸ್ತ್ರ ಕಿತ್ತುಹಾಕಿ, ತನ್ನನ್ನು ಹಿಡಿದುಕೊಂಡಿದ್ದವನ ಕೈಯನ್ನು ಬಲವಾಗಿ ಕಚ್ಚಿ ಅಲ್ಲಿಂದ ಓಡಿ ಬಂದಿದ್ದಾನೆ.
ಓಡಿ ಬಂದ ಬಳಿಕ ರಸ್ತೆಯ ಪಕ್ಕದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದವರ ಬಳಿ ವಿಚಾರ ತಿಳಿಸಿದ್ದಾನೆ. ನಂತರ ಅಪಹರಣಕಾರರು ಅಲ್ಲಿಂದ ಪರಾರಿಯಾಗಿದ್ದಾರೆ. ಕೆಲಸಗಾರರ ಸಹಾಯದಿಂದ ನಮಗೆ ಮಾಹಿತಿ ಸಿಕ್ಕಿತು ಎಂದು ಪೋಷಕರು ಘಟನೆಯ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ.