ಚಿತ್ರದುರ್ಗ: 10 ವರ್ಷದ ಬಾಲಕನೊಬ್ಬನನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ಬೆಳಿಗ್ಗೆ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಗ್ರಾಮದ ಬಳಿ ಜಗದೀಶ್(10) ಹೊಲಕ್ಕೆ ಹೋಗಿ ವಾಪಸ್ಸಾಗುವಾಗ ದುಷ್ಕರ್ಮಿಗಳು ವಾಹನವೊಂದರಲ್ಲಿ ಬಾಲಕನನ್ನು ಅಪಹರಿಸಿದ್ದಾರೆ. ಬಳಿಕ ಬಾಲಕನ ಪೋಷಕರು ಅಪಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂತೆಯೇ ಪೊಲೀಸರು ಅಪಹರಣಕಾರರಿಗೆ ಬಲೆಬೀಸಿದ್ದರು.
ಬಾಲಕ ಆಂಧ್ರದ ರಾಯದುರ್ಗದಲ್ಲಿ ಪತ್ತೆಯಾಗಿದ್ದಾನೆ. ಬಾಲಕನನ್ನು ಅಪಹರಿಸಿದ್ದ ಆಂಧ್ರ ಮೂಲದ ನಾನಾಜಿ, ದುರ್ಗಾ ಪ್ರಸಾದ್, ಚಪ್ಪತಲಬಾಲು ರಾಜು, ಗುರ್ತಿ ನಾನಾಜಿ, ನಾಗಿರೆಡ್ಡಿ ಹಾಗೂ ದಮ್ಮು ಶಿವ ಈ ಆರು ಜನ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಹರಣಕಾರರನ್ನು ವಶಕ್ಕೆ ಪಡೆದ ಮೊಳಕಾಲ್ಮೂರು ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅಪಹರಣದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.