– 37 ನೇ ದಿನಕ್ಕೆ ಕಾಲಿಟ್ಟ ಸಸಲಾಟ್ಟಿ ಏತ ನೀರಾವರಿ ಪ್ರತಿಭಟನೆ
ಬಾಗಲಕೋಟೆ: ಐವತ್ತು ವರ್ಷಗಳ ಕಾಲ ಕಾಂಗ್ರೆಸ್ನವರು ಆಡಳಿತ ನಡೆಸಿ ದೇಶ ಲೂಟಿ ಹೊಡೆದಿದ್ದಾರೆ ಹಾಗಾಗಿ ಅವ್ರ ಮನೆಗಳ ಮೇಲೆಯೇ ಐಟಿ ದಾಳಿಯಾಗುತ್ತಿವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಹೇಳಿದ್ದಾರೆ.
ಸಸಲಾಟ್ಟಿ ಏತ ನೀರಾವರಿ ಜಾರಿಗೆ ಆಗ್ರಹಿಸಿ ನೆಡೆಯುತ್ತಿರುವ ರೈತ ಪ್ರತಿಭಟನೆ 37ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಘಟಕ ಇಂದು ಮುಧೋಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಮಾತನಾಡಿ, ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿಯಾಗಿದೆ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ್ತಿಲ್ಲ, ಕೂಡಲೇ ಅವ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ರು. ಇನ್ನು ಎಂಎಲ್ಸಿ ಗೋವಿಂದ್ರಾಜ್ ಅವ್ರ ಡೈರಿ ಬಗ್ಗೆ ಸೂಕ್ತ ತನಿಖೆಯಾದ್ರೆ ಸಿಎಂ ಸಿದ್ಧರಾಮಯ್ಯ ಮನೆಗೆ ಹೋಗ್ತಾರೆ. ಇನ್ನು ಡೈರಿ ಬಗ್ಗೆಯೂ ತನಿಖೆಯಾಗಲಿ, ಅನಂತ್ಕುಮಾರ್ ಹಾಗು ಯಡಿಯೂರಪ್ಪ ಡೈರಿ ಸಂಭಾಷಣೆ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ದಾಖಲೆ ಇಲ್ಲದೇ ಬಿಎಸ್ವೈ ಬಗ್ಗೆ ಮಾತನಾಡ್ತಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪಕ್ಕದ ಜಿಲ್ಲೆಯವ್ರೇ ಆದ್ರೂ ಈ ಭಾಗದ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಚಿಂತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ರೆ ಈ ಯೋಜನೆಯನ್ನ ಕೂಡಲೇ ಜಾರಿಗೊಳಿಸಬೇಕು. ಜಾರಿ ಆಗದೇ ಇದ್ದರೆ ಮುಂದೆ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಈ ಭಾಗದ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ರೆ ಈ ಬಾರಿಯ ಬಜೆಟ್ನಲ್ಲಿ 10 ಸಾವಿರ ಕೋಟಿ ರೂ. ತೆಗೆದಿಡಬೇಕು. ನೀರಾವರಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಇರುವ ಅವಕಾಶಗಳನ್ನ ಸಚಿವ ಎಂ.ಬಿ ಪಾಟೀಲ್ ಸರಿಯಾಗಿ ಬಳಸಿಕೊಳ್ಳದಿದ್ರೆ ಮುಂದಿನ ಜನ್ಮದಲ್ಲಿ ಅವರು ನೀರಾವರಿ ಮಂತ್ರಿ ಆಗಲ್ಲ ಎಂದರು.
ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸುವಿಕೆ ಬಗ್ಗೆ ಮಾತನಾಡಿ, ಪಕ್ಷದ ವತಿಯಿಂದ ಬ್ರಿಗೇಡ್ ಸಮಾವೇಶ ಮಾಡಲಾಗುತ್ತೆ. ಇನ್ನು ಯಡಿಯೂರಪ್ಪ ಹಾಗೂ ನಮ್ಮ ಮಧ್ಯೆ ಇದ್ದ ಸಮಸ್ಯೆ ಬಗೆಹರಿದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿ ನಕ್ಕರು.