ಮುಂಬೈ: ಕಳ್ಳತನದ ನೆಪದಲ್ಲಿ ನಾಲ್ವರು ಸ್ನೇಹಿತರು 17 ವರ್ಷದ ಯುವಕನ ಗಂಟಲು ಕೊಯ್ದು ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಆರೋಪಿಗಳನ್ನು ಶಹಝಾದ್ ಅಲಿ (20), ಸದ್ದಾಂ ಶೌಕಾಟ್ ಅಲಿ (19), ಸದ್ದಾಂ ಶೈಖ್ (18) ಮತ್ತು ಸೂತ್ರಧಾರ ನಯಾಜ್ ಹಶ್ಮಿ (19) ಎಂದು ಗುರುತಿಸಲಾಗಿದೆ. ಕೃತ್ಯ ನಡೆದ 8 ಗಂಟೆಯೊಳಗೆ ಖೇರ್ವಾಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯಾದ ದುರ್ದೈವಿ ಅಜಯ್ ಜೈಸ್ವಾಲ್ (17) ಎಂದು ಗುರುತಿಸಲಾಗಿದೆ. ಈ ಘಟನೆ ಸಾಂಟ್ ದಯಾನೇಶ್ವರ ನಗರದ ಕೊಳಗೇರಿಯಲ್ಲಿ ನಡೆದಿತ್ತು.
ಅಜಯ್ ಪೋಷಕರು ಮನೆಯಿಂದ ಹೊರಗೆ ಹೋಗಿದ್ದು, ಮಂಗಳವಾರ ಬೆಳಗ್ಗೆ 7 ಗಂಟೆಗೆ ವಾಪಸ್ ಬಂದಿದ್ದಾರೆ. ಕೊಲೆ ಮಾಡಿ ಕಳ್ಳರು ಮನೆಯ ಮುಂಬಾಗಿಲನ್ನು ಲಾಕ್ ಮಾಡಿ ಪರಾರಿಯಾಗಿದ್ದರು. ಮನೆಗೆ ಬಂದ ಪೋಷಕರು ಬಾಗಿಲನ್ನು ಬಡಿದಿದ್ದು, ಯಾವುದೇ ಪ್ರತಿಕ್ರಿಯೇ ಬರದಿದ್ದಾಗ ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಅಜಯ್ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದನ್ನು ನೋಡಿ ಪೋಷಕರು ದೂರು ದಾಖಲಿಸಿದ್ದರು.
ಪಕ್ಕದಲ್ಲಿಯೇ ವಾಸಿಸುತ್ತಿದ್ದ, ಅಜಯ್ ಸಹೋದರಿ ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳನ್ನು ಬಂಧಿಸಲು ಅನಿಲ್ ಕುಂಬಾರೆ ಅವರ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಪಾಟೀಲ್ ಮಾಹಿತಿ ನೀಡಿದ್ದಾರೆ.
ನಾಲ್ವರು ಆರೋಪಿಗಳು ಮೊದಲೇ ಪ್ಲಾನ್ ಮಾಡಿ ಅಜಯ್ನನ್ನು ಕೊಲ್ಲಲು ಆತನ ಮನೆಗೆ ಹೋಗಿದ್ದರು. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದೇ ಇರಲು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದೇವು ಎಂದು ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಹಶ್ಮಿ ಒಬ್ಬ ಡ್ರಗ್ಗೆ ಅಡಿಕ್ಟ್ ಆಗಿದ್ದ. ಅವನ ಜೊತೆಗೆ ಬಂದಿದ್ದ ಸ್ನೇಹಿತರಿಗೆ ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅವರು ಗಂಟಲು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.