– ಇಂದು ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಮುಂಗಾರು
ಬಾಗಲಕೋಟೆ: ಮುಂಗಾರು ಮಳೆ ಆರ್ಭಟ ಶುರುವಾಗುವ ಮೊದಲೇ ಮಳೆಗೆ ನಾಲ್ವರು ಸಾವನ್ನಪ್ಪಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅನವಾಲ್ ಗ್ರಾಮದ ಕೊಳ್ಳದಲ್ಲಿ ನಡೆದಿದೆ.
ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಕಾರು ಚಲಾಯಿಸಿದಾಗ ಕಾರು ಕೊಚ್ಚಿಕೊಂಡು ಹೋಗಿ ನಾಲ್ವರು ಜೀವಬಿಟ್ಟಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಬದುಕುಳಿದಿದ್ದಾರೆ. ಹಂಡಗೆರಿ ಗ್ರಾಮದ ಯಮನಪ್ಪ ಬಸಪ್ಪ(45), ರುದ್ರಪ್ಪ ಗುರಪ್ಪನವರ(55), ಅಶೋಕ್(40), ಹೊಳಬಸಪ್ಪ(55) ಅನ್ನೋರು ಸಾವನ್ನಪ್ಪಿದ್ದಾರೆ. ಯಂಡಿಗೇರಿಯ ಬಸಲಿಂಗಪ್ಪ ಶಿರಗುಂಪಿ ಕಾರಿನಿಂದ ಜಿಗಿದು ಪ್ರವಾಹದ ನೀರಲ್ಲಿ ಈಜಿ ಅದೃಷ್ಷವಶಾತ್ ಸಾವಿನಿಂದ ಪಾರಾಗಿದ್ದಾರೆ.
ಇವತ್ತಿನಿಂದ ಮುಂಗಾರು ಮಳೆ ಕರಾವಳಿಗೆ ಬಂದು ಅಪ್ಪಳಿಸಲಿದೆ. ವಾಡಿಕೆಯಂತೆ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಜೂನ್ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದೆಲ್ಲೆಡೆ ಶೇಕಡಾ 96 ರಿಂದ ಶೇಕಡಾ 104 ರಷ್ಟು ಮಳೆಯಾಗಲಿದೆ. ಜೂನ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬರೋಬ್ಬರಿ 887ಮಿಲಿ ಮೀಟರ್ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ವಾಯುವ್ಯ ಭಾರತದಲ್ಲಿ 100ಕ್ಕೆ 100ರಷ್ಟು ಮಳೆಯಾಗಲಿದ್ರೆ, ಮಧ್ಯ ಭಾರತದಲ್ಲಿ 99ರಷ್ಟು, ದಕ್ಷಿಣ ಭಾರತ ಹಾಗು ಆಗ್ನೇಯ ಭಾರತದ ಕಡೆ 96ರಷ್ಟು ಮುಂಗಾರು ಮಳೆ ಬರಲಿದೆ ಎಂಬ ಅಂಕಿ ಅಂಶವನ್ನು ಮೊದಲ ಬಾರಿಗೆ ನೀಡಿದೆ. ಹವಾಮಾನದಲ್ಲಿ ಏನೇ ಬದಲಾವಣೆಯಾದ್ರೂ ಈ ಬಾರಿ 95ರಷ್ಟು ಮುಂಗಾರು ಮಳೆ ಆಗಲಿದೆ ಅಂತಾ ಹವಾಮಾನ ಇಲಾಖೆ ಖಚಿತವಾಗಿ ಹೇಳಿದೆ.