ಕೋಲಾರ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಶವಗಳು ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದ ಕುಪ್ಪಂ ಮಾಲನೂರು ಬಳಿ ನಡೆದಿದೆ.
ಮೃತರು ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲದ ಕೋಟಲೂರು ಗ್ರಾಮದ ನಿವಾಸಿಗಳಾಗಿದ್ದು, ಅನಬಲಗನ್ (35), ಪತ್ನಿ ಲಕ್ಷ್ಮೀ (25) ಹಾಗೂ ಮೂರು ವರ್ಷದ ಮಗು ಜನನಿ ಎಂದು ಗುರುತಿಸಲಾಗಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮೂರು ವರ್ಷದ ಮಗುವಿನೊಂದಿಗೆ ರೈಲಿಗೆ ಸಿಲುಕಿ ಗಂಡ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಗಂಡ ಅನಬಲಗನ್ ಕುಪ್ಪಂ ನಲ್ಲಿ ಒಂದು ಟೀ ಅಂಗಡಿ ನಡೆಸುತ್ತಿದ್ದರು. ಹೆಂಡತಿ ಲಕ್ಷ್ಮೀ ಒಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತಿ ಪತ್ನಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಸಣ್ಣಪುಟ್ಟ ಹಣಕಾಸು ವ್ಯವಹಾರದಲ್ಲಿ ನಷ್ಟವಾಗಿತ್ತು ಎಂಬುದು ಲಕ್ಷ್ಮೀ ಸಂಬಂಧಿಕರ ಮಾತಾಗಿದೆ. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಅನುಮಾನಾಸ್ಪದ ರೀತಿಯಲ್ಲಿ ಮೂರು ಜನರ ಮೃತ ದೇಹಗಳು ರೈಲು ಹಳಿಯಲ್ಲಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕುಪ್ಪಂ ರೈಲ್ವೇ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.