ಬೆಂಗಳೂರು/ತ್ರಿಪುರ: 2005ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಐಐಎಸ್ಸಿ ಉಗ್ರ ದಾಳಿಯ ಪ್ರಮುಖ ಆರೋಪಿಯನ್ನು ಕರ್ನಾಟಕ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ತ್ರಿಪುರದ ಅಗರ್ತಲ ನಗರ ಹೊರವಲಯದ ಜೋಗೇಂದ್ರ ನಗರದಲ್ಲಿ 37 ವರ್ಷದ ಹಬೀಬ್ ಮಿಯಾ ಎಂಬಾತನನ್ನು ಬಂಧಿಸಿರುವುದಾಗಿ ಕರ್ನಾಟಕ ಪೊಲೀಸರು ಖಚಿತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರಿಗೆ ತ್ರಿಪುರ ಪೊಲೀಸರು ನೆರವು ನೀಡಿದ್ದಾರೆ.
ಈ ವಿಚಾರವನ್ನು ಐಎಎನ್ಎಸ್ ಸುದ್ದಿ ಸಂಸ್ಥೆಗೆ ಖಚಿತ ಪಡಿಸಿರುವ ತ್ರಿಪುರ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕರ್ನಾಟಕ ಪೊಲೀಸರು ತ್ರಿಪುರ ಪೊಲೀಸರ ನೆರವಿನೊಂದಿಗೆ ಶಂಕಿತ ಉಗ್ರ ಹಬೀಬ್ ಮಿಯಾನನ್ನು ಬಂಧಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಹಬೀಬ್ ಮಿಯಾ 2015ರಲ್ಲಿ ಬೆಂಗಳೂರಿನ ಐಐಎಸ್ಸಿಯಲ್ಲಿ ನಡೆದ ದಾಳಿಯಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನನ್ನು ಶನಿವಾರ ಇಲ್ಲಿನ ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
2005ರ ಡಿಸೆಂಬರ್ 28ರಂದು ನಡೆದ ಐಐಎಸ್ಸಿ ದಾಳಿಯಲ್ಲಿ ಮ್ಯಾಥ್ಸ್ ನಿವೃತ್ತ ಪ್ರೊಫೆಸರ್ ಮುನೀಷ್ ಚಂದ್ರ ಪುರಿ ಸಾವನ್ನಪ್ಪಿದ್ದರು. ಅಲ್ಲದೆ ಈ ಘಟನೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದರು.