ಯಾದಗಿರಿ: ಪತಿ ರಜೆ ಪಡೆಯದ ಹಿನ್ನಲೆಯಲ್ಲಿ ಮನನೊಂದು ಎರಡು ತಿಂಗಳ ಗರ್ಭಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ನಗರದ ರೈಲ್ವೆ ನಿಲ್ದಾಣದ ಹತ್ತಿರ ನಡೆದಿದೆ.
ಪೂಜಾ ರಾಠೋಡ್(19) ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಮೃತ ಪೂಜಾಳ ಗಂಡ ಆನಂದ್ ಯಾದಗಿರಿ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಪೂಜಾ ಗಂಡ ಆನಂದ್ ಅವರಿಗೆ ರಜೆ ಪಡೆಯಲು ಸೂಚಿಸಿದ್ದಳು. ಆದರೆ ಆನಂದ್ ರಜೆ ಪಡೆಯದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಮನನೊಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಾನು ಎರಡು ದಿನದಲ್ಲಿ ರಜೆ ಪಡೆದುಕೊಂಡು ಊರಿಗೆ ಹೋಗಬೇಕು ಎಂದು ತೀರ್ಮಾನಿಸಿದ್ದೆ. ಆದರೆ ಕರ್ತವ್ಯ ಮಗಿಸಿಕೊಂಡು ಬಂದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆನಂದ್ ಹೇಳಿದ್ದಾರೆ.
ಸದ್ಯ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.