ಕಾರವಾರ: ವಾಯುವ್ಯ ಸಾರಿಗೆ ಬಸ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿಯೇ 9 ವರ್ಷದ ಬಾಲಕ ಮತ್ತು 20 ವರ್ಷದ ಯುವತಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206 ರ ಯಲಗುಪ್ಪಾದಲ್ಲಿ ನೆಡೆದಿದೆ.
ಮೈಸೂರು ಮೂಲದ ವಿದ್ಯಾರ್ಥಿನಿ ಸಂಗೀತ ಹಾಗೂ ಹುಬ್ಬಳ್ಳಿ ಮೂಲದ ಮಂಗಳವಾರ ಪೇಠೆ ನಿವಾಸಿ 9 ವರ್ಷದ ಪ್ರೀತಮ್ ಮೃತ ದುರ್ದೈವಿಗಳು. ಕಾರವಾರದಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಬಸ್ ನಲ್ಲಿ ಸುಮಾರು 30 ಪ್ರಯಾಣಿಕರು ಚಿಕ್ಕಮಗಳೂರಿಗೆ ಹೋಗುತ್ತಿದ್ದರು. ಬಸ್ ಚಾಲಕ ತುಂಬಾ ವೇಗವಾಗಿ ಬಸ್ ಓಡಿಸುತ್ತಿದ್ದು, ಬೇರೆ ವಾಹನಗಳಿಗಿಂತ ಮುಂದೆ ಹೋಗಲು ಹೋಗಿ ಯಲಗುಪ್ಪಾದಲ್ಲಿ ರಸ್ತೆ ಬದಿಯ ಬಳಿ ಬಸ್ ಪಲ್ಟಿ ಹೊಡೆದಿದೆ. ಬಸ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಸುಮಾರು 10 ಕ್ಕಿಂತ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ನಡೆದ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದಿದ್ದು, ಅಪಘಾತದಲ್ಲಿ ಆತನಿಗೂ ಗಾಯಗಳಾಗಿರುವುದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನು ಓದಿ: 60 ಪ್ರಯಾಣಿಕರ ಪ್ರಾಣ ಉಳಿಸಿದ್ದ ಚಾಲಕನಿಗೆ ಸಿಕ್ತು ಚಿನ್ನದ ಪದಕ!