ಚಿಕ್ಕಬಳ್ಳಾಪುರ: ಕಳೆದ ರಾತ್ರಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನವಾಗಿದೆ.
ಆಂಧ್ರದ ಗಡಿಗೆ ಹೊಂದಿಕೊಂಡಿರುವ ಐವಾರಪಲ್ಲಿ, ಲಘು ಮದ್ದೇಪಲ್ಲಿ, ಚಿಕ್ಕ ತಿಮ್ಮನಹಳ್ಳಿ, ಪಾಕು ಪಟ್ಲಪಲ್ಲಿ ಸೇರಿದಂತೆ ತುಮಕೇಪಲ್ಲಿ ಹಾಗೂ ಹತ್ತು ಹಲವು ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ.
ಎರಡು ಬಾರಿ 5-6 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದು, ಮನೆಗಳಲ್ಲಿನ ಪಾತ್ರೆ ಸಾಮಾನುಗಳು ಕೆಳಗೆ ಬಿದ್ದಿವೆ. ಈ ವೇಳೆ ಕರ್ಕಶ ಶಬ್ಧ ಕೂಡ ಕೇಳಿಬಂದಿದೆ ಎನ್ನಲಾಗಿದ್ದು, ರಾತ್ರಿಯಿಡೀ ಗ್ರಾಮಸ್ಥರು ಭಯದಲ್ಲೇ ಕಾಲ ಕಳೆದು ನಿದ್ದೆಗೆಟ್ಟಿದ್ದಾರೆ.
ಭೂಮಿ ನಡುಗಿದ ಅನುಭವದಿಂದಾಗಿ ರಸ್ತೆ ಬದಿಯಲ್ಲಿಯೇ ಜನ ಕಾಲ ಕಳೆದಿದ್ದಾರೆ. ಆದರೆ ಭೂಕಂಪನದಿಂದ ಯಾವುದೇ ಅವಘಡ ಸಂಭವಿಸಿಲ್ಲ. ಭೂಕಂಪನವಾದ ಗ್ರಾಮಗಳಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಹಾಗೂ ಬಾಗೇಪಲ್ಲಿ ವೃತ್ತ ನಿರೀಕ್ಷಕ ಗೋವಿಂದರಾಜು ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದ್ದಾರೆ.
ಭೂಕಂಪನ ಆಗಿರುವುದು ಅಧಿಕೃತವಾಗಿ ದೃಢಪಟ್ಟಿದೆ. ರೆಕ್ಟರ್ ಮಾಪನದಲ್ಲಿ ಪರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇದರ ಪ್ರಮಾಣ 1.2 ರಷ್ಟು ತೀವ್ರತೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ತಹಶೀಲ್ದಾರ್ ಮಹಮದ್ ಅಸ್ಲಾಂ ಸ್ಪಷ್ಟಪಡಿಸಿದ್ದಾರೆ.